ತಾಜಾ ಸುದ್ದಿ

ಮಹಾನಗರ ಪಾಲಿಕೆ ಪೌರಕಾರ್ಮಿಕ(ಮೇಸ್ತ್ರಿ) ಮೂರ್ತಿಗೆ ಕಿರುಕುಳ ನೀಡಿದ ಪಾಲಿಕೆ ಮಾಜಿ ಸದಸ್ಯ ಬಿಜೆಪಿಯ ಪ್ರಭು ಯಾನೆ ಪ್ರಭಾಕರ್ ವಿರುದ್ದ ಪಾಲಿಕೆ ನೌಕರ ವರ್ಗ ಪ್ರತಿಭಟನಾ ಧರಣಿ

Share Below Link

ಶಿವಮೊಗ್ಗ : ಶಿವಮೊಗ್ಗ ಮಹಾನಗರ ಪಾಲಿಕೆ ಪೌರಕಾರ್ಮಿಕ(ಮೇಸ್ತ್ರಿ) ಮೂರ್ತಿಗೆ ಕಿರುಕುಳ ನೀಡಿದ ಮಹಾನಗರಪಾಲಿಕೆ ಮಾಜಿ ಸದಸ್ಯ ಬಿಜೆಪಿಯ ಪ್ರಭು ಯಾನೆ ಪ್ರಭಾಕರ್ ವಿರುದ್ದ ಪಾಲಿಕೆ ನೌಕರ ವರ್ಗ ಪ್ರತಿಭಟನಾ ಧರಣಿ ನಡೆಸಿದೆ.

ಪಾಲಿಕೆ ಅವಧಿ ಮುಗಿದಿದ್ದರೂ ಮಾಜಿ ಸದಸ್ಯರಾಗಿರುವ ಪ್ರಭು ಯಾನೆ ಪ್ರಭಾಕರ್ ತಮ್ಮ ವಾರ್ಡಿನ ಪೌರಕಾರ್ಮಿಕ ಮೇಸ್ತ್ರಿ ಮೂರ್ತಿಗೆ ಅನಾವಶ್ಯಕ ಕಿರುಕುಳ ನೀಡಿ ಆತ್ಮಹತ್ಯೆ ನಿರ್ಧಾರಕ್ಕೆ ಬರುವಂತೆ ಪ್ರಚೋದಿಸಿದ್ದು, ಅವರ ವಿರುದ್ದ ಆತ್ಮಹತ್ಯೆಗೆ ಪ್ರಚೋದನೆ, ಜಾತಿನಿಂದನೆ ಮತ್ತು ಸರ್ಕಾರಿ ನೌಕರಿಗೆ ಅಡ್ಡಿಪಡಿಸಿದ ಪ್ರಕರಣ ದಾಖಲಿಸಿ ಕೂಡಲೆ ಬಂಧಿಸಬೇಕೆಂದು ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘದ ಶಿವಮೊಗ್ಗ ಮಹಾನಗರ ಪಾಲಿಕೆ ಶಾಖಾಸಂಘದ ನೇತೃತ್ವದಲ್ಲಿ ಇಂದು ನೌಕರವರ್ಗ ಪ್ರತಿಭಟನಾ ಧರಣಿ ನಡೆಸಿತು.

ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಗುರದತ್ ಪ್ರಸಾದ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಮಿಥುನ್‍ಕುಮಾರ್ ಅವರು ಮನವಿ ಸ್ವೀಕರಿಸಿದ್ದು ಕಾನೂನು ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

“ಪೌರಕಾರ್ಮಿಕರ ಮೇಲೆ ನಡೆಯುವ ಕಿರುಕುಳವನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಇಡೀ ನಗರದ ಸ್ವಚ್ಛತೆ ಕಾಪಾಡಲು ಹಗಲು ರಾತ್ರಿದುಡಿಯುವ ಪೌರಕಾರ್ಮಿಕರು, ಪಾಲಿಕೆ ನೌಕರ ವರ್ಗದ ಮೇಲೆ ಯಾರೆ ದಬ್ಬಾಳಿಕೆ ನಡೆಸಿದರೆ ಖಂಡನೀಯ ಅವರ ವಿರುದ್ದ ಹೋರಾಟ ಮಾಡಲಾಗುವುದು. ಮೂರ್ತಿ ಗೆ ಕಿರುಕುಳ ನೀಡಿದ ಮಾಜಿ ಪಾಲಿಕೆ ಸದಸ್ಯ ಪ್ರಭು ಅವರನ್ನು ಕೂಡಲೆ ಬಂಧಿಸಬೇಕು ಎಂದು ಮಹಾನಗರಪಾಲಿಕೆ ನೌಕರರ ಸಂಘದ ಅಧ್ಯಕ್ಷ ಎನ್. ಗೋವಿಂದ ಹೇಳಿದರು.

13 ನೇ ವಾರ್ಡಿನ ಮೇಸ್ತಿಯಾಗಿದ್ದ ಮೂರ್ತಿಗೆ ಮಾಜಿ ಸದಸ್ಯ ಪ್ರಭು ಪ್ರತಿನಿತ್ಯಕಿರುಕುಳ ನೀಡುತ್ತಿದ್ದು, ಇದರಿಂದ ಬೇಸತ್ತು ತಾನು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ನೆನ್ನೆ ವಿಡಿಯೋ ಹರಿಬಿಟ್ಟಿದ್ದ ಮೂರ್ತಿ ನಾಪತ್ತೆಯಾಗಿದ್ದರು. ತಕ್ಷಣವೇ ನೌಕರ ಸಂಘದ ಅಧ್ಯಕ್ಷರಾದ ಎನ್. ಗೋವಿಂದ, ಪದಾಧಿಕಾರಿಗಳು ಮತ್ತು ಕೋಟೆ ಪೆÇಲೀಸರು ಮೊಬೈಲ್ ಟವರ್ ನೆಟ್‍ವರ್ಕ್ ನಿಂದ ಉಂಬ್ಳೇಬೈಲು ಅರಣ್ಯ ಪ್ರದೇಶದಲಿದ್ದ ಮೂರ್ತಿಯನ್ನು ಪತ್ತೆ ಹಚ್ಚಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಯಿತು.

ನೌಕರರ ಪ್ರತಿಭಟನೆಗೆ ಡಿಎಸ್ ಎಸ್ ಮುಖಂಡರಾದ ರಂಗಪ್ಪ, ಮಾದಿಗ ಸಮುದಾಯದ ಮುಖಂಡ ತೇಜೇಸ್ ಸೇರಿದಂತೆ ಅನೇಕ ಸಂಘಟನೆಗಳ ಮುಖಂಡರು ಬೆಂಬಲ ನೀಡಿದ್ದರು.

ಶಾಸಕ ಎಸ್ ಎನ್ ಚನ್ನಬಸಪ್ಪ, ಮಾಜಿ ಪಾಲಿಕೆ ಸದಸ್ಯ ಹೆಚ್.ಸಿ ಯೋಗೀಶ್, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರಾದ ಶಿವಕುಮಾರ್, ಕಾಶಿವಿಶ್ವನಾಥ್ ಭೇಟಿ ನೀಡಿ ಅಹವಾಲು ಆಲಿಸಿದರು.

error: Content is protected !!