ತಾಜಾ ಸುದ್ದಿಶಿವಮೊಗ್ಗಶಿವಮೊಗ್ಗ ನಗರ

ಮಾತುಕತೆಗೆ ಮುಂದಾಗದಿದ್ದರೆ ರೈತ ಚಳವಳಿ ತೀವ್ರ, ಕೇಂದ್ರ ಸರ್ಕಾರಕ್ಕೆ ರೈತ ನಾಯಕ ಹೆಚ್. ಆರ್. ಬಸವರಾಜಪ್ಪ ಎಚ್ಚರಿಕೆ

Share Below Link

ಶಿವಮೊಗ್ಗ: ರೈತರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ದೆಹಲಿ ಗಡಿಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ನಡೆಸುತ್ತಿರುವ ಚಳವಳಿಯನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿ, ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಇಂದು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನೆಡೆಸಲಾಯಿತು.

ದೆಹಲಿ ಗಡಿಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ನೇತೃತ್ವದಲ್ಲಿ ಸಾವಿರಾರು ಮಂದಿ ರೈತರು ನಡೆಸುತ್ತಿರುವ ಚಳವಳಿ ಕೇವಲ ಪಂಜಾಬ್ ಮತ್ತು ಹರಿಯಾಣ ರೈತರಿಗೆ ಮಾತ್ರ ಸೀಮಿತವಾಗಿಲ್ಲ.ಭಾರತ ದೇಶದ ರೈತರ ಪರವಾಗಿ ಚಳುವಳಿ ನಡೆಯುತ್ತಿದೆ. ಜಗತ್‍ಸಿಂಗ್ ದಲೈವಾಲರವರು ಸಹ ಈ ದೇಶದ ರೈತರ ಪರವಾಗಿ ಗಾಂಧಿಜೀಯವರು ಹಾಕಿಕೊಟ್ಟಂತಹ ಮಾರ್ಗದಲ್ಲಿ ಅಹಿಂಸಾತ್ಮಕ ವಾದ ಮಾರ್ಗದಲ್ಲಿ ಚಳವಳಿ ನಡೆಸುತ್ತಿದ್ದಾರೆ. ಇದನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸದಿದ್ದರೆ ರೈತ ಚಳವಳಿಯನ್ನು ದೇಶಾದ್ಯಂತ ತೀವ್ರಗೊಳಿಸಲಾಗುವುದೆಂದು ಎಚ್ಚರಿಸಿ ಜಿಲ್ಲಾಡಳಿತದ ಮೂಲಕಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಲಾಯಿತು.

ರಾಜ್ಯರೈತ ಸಂಘದ ರಾಜ್ಯಾಧ್ಯಕ್ಷ ಹೆಚ್.ಆರ್.ಬಸವರಾಜಪ್ಪ ಪ್ರತಿಭಟನೆಯಲ್ಲಿ ಮಾತನಾಡಿ, ದೆಹಲಿ ಹೊರವಲಯದಲ್ಲಿ ಈ ಹಿಂದೆ 13 ತಿಂಗಳ ಕಾಲ ರೈತರು ಚಳುವಳಿ ನಡೆಸಿದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಚಳುವಳಿಗೆ ಮಣಿದು ರೈತ ವಿರೋಧಿ 3ಕೃಷಿ ಕಾಯ್ದೆಗಳನ್ನು ವಾಪಾಸ್ಸು ಪಡೆಯಿತು. ಅದೇ ವೇಳೆ ಎಂ.ಎಸ್.ಪಿ ಕಾನೂನು ಬದ್ಧವಾಗಿ ಜಾರಿ ಮಾಡುವುದಾಗಿ, ವಿದ್ಯುತ್‍ಚ್ಚಕ್ತಿ ಖಾಸಗೀಕರಣ ಮಾಡುವುದಿಲ್ಲವೆಂದು ಲಿಖಿತ ಭರವಸೆ ಕೊಟ್ಟಿತ್ತು. 2 ವರ್ಷ ಕಳೆದರೂ ಲಿಖಿತ ಭರವಸೆ ಈಡೇರಿಲ್ಲ ಎಂದು ದೂರಿದರು.

ಸರ್ಕಾರ ಕೊಟ್ಟ ಭರವಸೆ ಈಡೇರಿಸದ ಕಾರಣ ಹರಿಯಾಣದ ಶಂಭು ಗಡಿಯಲ್ಲಿ 8 ತಿಂಗಳುಗಳಿಂದ ರೈತರು ಚಳುವಳಿ ನಡೆಸುತ್ತಿದ್ದಾರೆ. ರೈತ ನಾಯಕ ಜಗತ್‍ಸಿಂಗ್ ದ ವಾಲರವರು 38 ದಿನಗಳಿಂದ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದು, ಇವರ ಆರೋಗ್ಯ ಸಂಪೂರ್ಣ ಹದಗೆಟ್ಟಿದೆ. ದೇಶದ ಕೃಷಿ ಕ್ಷೇತ್ರದ ಅಭಿವೃದ್ಧಿಗೊಸ್ಕರ ಜೀವನ್ಮರಣದ ಮಧ್ಯೆ ಹೋರಾಡುತ್ತಿದ್ದಾರೆ. ಸುಪ್ರೀಂ ಕೋರ್ಟ್ ಸಹ ಕೇಂದ್ರ ಸರ್ಕಾರ ಮತ್ತು ಪಂಜಾಬ್ ಸರ್ಕಾರ ಇವರ ಸಮಸ್ಯೆಗಳ ಬಗ್ಗೆ ಮಾತುಕತೆ ನಡೆಸಿ ನ್ಯಾಯವಾಗಿ ಪರಿಹಾರ ಕೊಟ್ಟು ಅಮೂಲ್ಯವಾದಂತಹ ಅವರ ಜೀವ ಉಳಿಸಬೇಕೆಂದು ಎರಡು ಸರ್ಕಾರಗಳಿಗೆ ಸೂಚನೆ ಕೊಟ್ಟಿದೆ. ಆದಾಗ್ಯೂ ಸರ್ಕಾರಗಳು ನಿರ್ಲಕ್ಷವಹಿಸಿವೆ ಎಂದು ಕಿಡಿಕಾರಿದರಲ್ಲದೆ, ಚಳವಳಿ ನಿರತ ರೈತ ಮುಖಂಡರ ಜತೆಗೆ ಕೇಂದ್ರ ಸರ್ಕಾರ ಮಾತುಕತೆ ನಡೆಸುವ ಮೂಲಕ ರೈತರ ಬೇಡಿಕೆ ಈಡೇರಿಸಬೇಕು, ರೈತ ಮುಖಂಡನ ಪ್ರಾಣ ಉಳಿಸುವ ಕೆಲಸ ಮಾಡಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಕೆ. ರಾಘವೇಂದ್ರ, ರಾಜ್ಯ ಉಪಾಧ್ಯಕ್ಷ ಹಿಟ್ಟೂರು ರಾಜು, ಭದ್ರಾವತಿ ತಾಲೂಕು ಪ್ರಧಾನ ಕಾರ್ಯದರ್ಶಿ ಹನುಮಂತಪ್ಪ, ತಾಲೂಕು ಅಧ್ಯಕ್ಷ ಜಿ. ಎನ್. ಪಂಚಾಕ್ಷರಿ ಸೇರಿದಂತೆ ಮತ್ತಿತರರು ಇದ್ದರು.

error: Content is protected !!