ಕಾರಿನ ಗ್ಲಾಸ್ ಒಡೆದು ಪರಾರಿಯಾದ ಮೂವರು ಪೊಲೀಸರ ಬಲೆಗೆ
ಶಿವಮೊಗ್ಗ: ಮನೆ ಮುಂಭಾಗ ನಿಲ್ಲಿಸಿದ ಕಾರಿನ ಹಿಂಭಾಗದ ಗ್ಲಾಸ್ ಒಡೆದ ಸಂಬಂಧ ದೊಡ್ಡ ಪೇಟೆ ಠಾಣೆಯಲ್ಲಿ ದಾಖಲಾಗಿದ್ದ ದೂರಿನ ಸಂಬಂಧ ಪೊಲೀಸರು ಮೂವರು ಆರೋಪಿಗಳನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆ.
ಶಿವಮೊಗ್ಗದ ವಿನೋಬನಗರ ಚಾನಲ್ ಏರಿಯಾ 6ನೇ ಕ್ರಾಸ್ ನಿವಾಸಿ ಶರತ್, ವಿನೋಬನಗರ ಮೇದಾರ ಕೇರಿ 2ನೇ ಕ್ರಾಸ್ ನಿವಾಸಿ ಪ್ರಶಾಂತ್ ಹಾಗೂ ಶರಾವತಿ ನಗರದವೀಣಾ ಶಾರದಾ ಶಾಲೆ ಹಿಂಭಾಗದ 2ನೇ ಕ್ರಾಸ್ ನಿವಾಸಿ ಸತೀಶ ಬಂಧಿತ ಆರೋಪಿಗಳಾಗಿದ್ದು, ಇವರು ಮಾ.3ರಂದು ಶರಾವತಿ ನಗರದ ಹಂದಿಜೋಗಿ ಬೀದಿ ನಿವಾಸಿ ಸುರೇಶ ಆರ್ ಬಿನ್ ರಾಮಣ್ಣ ಅವರಿಗೆ ಸೇರಿದ ಕಾರಿನ ಗ್ಲಾಸ್ ಪಡೆದು ಪರಾರಿಯಾಗಿದ್ದರು.
ಪ್ರಕರಣದ ಸಂಬಂಧ ಮಾ.4ರಂದು ದೊಡ್ಡ ಪೇಟೆ ಪೊಲೀಸರಿಗೆ ದೂರು ನೀಡಿದ್ದ ಸುರೇಶ್ ಅವರು, ತಮ್ಮ ಮನೆ ಮುಂಭಾಗದಲ್ಲಿ ನಿಲ್ಲಿಸಿದ್ದು ಕಾರಿನ ಹಿಂಭಾಗದ ಗ್ಲಾಸ್ ಅಪರಿಚಿತರು ಒಡೆದು, ಸುಮಾರು 2 ರಿಂದ 2.5 ಲಕ್ಷ ರೂ ಮೊತ್ತದ ನಷ್ಟ ಮಾಡಿರುತ್ತಾರೆಂದು ದೂರು ನೀಡಿದ್ದರು.
ಈ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು. ಆರೋಪಿಗಳನ್ನು ವಿಚಾರಣೆ ನಡೆಸಿದ ವೇಳೆ ದೂರುದಾರ ಸುರೇಶ್ ಎಂಬಾತನಿಗೂ ಬಂಧಿತರಲ್ಲಿ ಒಬ್ಬರಾದ ಸತೀಶ್ ಎಂಬಾತನಿಗೂ ಮನೆ ಖರೀದಿ ವಿಚಾರದಲ್ಲಿ ಜಗಳವಿದ್ದು,ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಕೇಸು, ಪ್ರತಿಕೇಸು ದಾಖಲಾಗಿತ್ತು. ಈ ವಿಷಯವನ್ನು ಸತೀಶ ತನ್ನ ಸ್ನೇಹಿತ ಶರತ್, ಪ್ರಶಾಂತ್ ಬಳಿ ಹೇಳಿಕೊಂಡಿದ್ದ ಹಿನ್ನೆಲೆಯಲ್ಲಿ ಆರೋಪಿಗಳು ಕಾರಿನ ಗ್ಲಾಸ್ ಒಡೆದಿದ್ದಾರೆಂದು ಪೊಲೀಸ್ ಪ್ರಕಟಣೆ ತಿಳಿಸಿದೆ.

