ಕೇಂದ್ರ-ರಾಜ್ಯ ಸರ್ಕಾರಗಳು ಶರಾವತಿ ಮುಳುಗಡೆ ಸಂತ್ರಸ್ಥರ ಸಮಸ್ಯೆ ತಕ್ಷಣ ಬಗೆಹರಿಸಲಿ – ತೀ.ನ. ಶ್ರೀನಿವಾಸ್ ಆಗ್ರಹ
ಶಿವಮೊಗ್ಗ: ಶರಾವತಿ ಮುಳುಗಡೆ ಸಂತ್ರಸ್ಥರ ಸಮಸ್ಯೆಗಳನ್ನು ಕೇಂದ್ರ-ರಾಜ್ಯ ಸರ್ಕಾರಗಳು ಬಗೆಹರಿಸಬೇಕು ಎಂದು ಸುಪ್ರೀಂಕೋರ್ಟ್ ಆದೇಶ ಮಾಡಿದ್ದರೂ ರಾಜ್ಯ ಸರ್ಕಾರ ಸಂತ್ರಸ್ಥರನ್ನು ಎತ್ತಂಗಡಿ ಮಾಡಿ ರೈತರಿಗೆ ಅನ್ಯಾಯ ಎಸಗುತ್ತಿದೆ ಎಂದು ಮಲೆನಾಡು ರೈತ ಹೋರಾಟ ಸಮಿತಿಯ ಸಂಚಾಲಕ ತೀ.ನ. ಶ್ರೀನಿವಾಸ್ ಆಕ್ರೋಶ ವ್ಯಕ್ತಪಡಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸುಪ್ರೀಂಕೋರ್ಟ್ ಅರಣ್ಯವಾಸಿಗಳಿಗೆ ಅರಣ್ಯಹಕ್ಕು ಕಾಯ್ದೆ ಪ್ರಕಾರ ನ್ಯಾಯಕೊಡಿ ಎಂದಿದ್ದರೂ ಕೋರ್ಟ್ ಆದೇಶ ಉಲ್ಲಂಘಿಸಿ ಸುಮಾರು 80 ಸಾವಿರ ರೈತರ ಅರ್ಜಿಗಳನ್ನು ವಜಾಮಾಡಲಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಮುಳುಗಡೆ ಸಂತ್ರಸ್ಥರಿಗೆ ಕೊಟ್ಟ ಹಕ್ಕುಪತ್ರ ವಜಾಮಾಡಲು ಅರಣ್ಯ ಇಲಾಖೆ ಶಿಫಾರಸ್ಸು ಮಾಡಿದಂತೆ ಪ್ರಕರಣ ದಾಖಲು ಮಾಡಲಾಗಿದೆ. ಕೋರ್ಟ್ ಆದೇಶದ ಹೆಸರಿನಲ್ಲಿ ಸುಮಾರು 40 ಸಾವಿರ ರೈತರ ಮೇಲೆ ಕಾನೂನುಬಾಹಿರ ಹಕ್ಕುಪತ್ರ ಪಡೆದಿದ್ದಾರೆ ಎಂದು ಅವರು ಆರೋಪಿಸಿದರು.
ಈ ರೈತರ ಸಮಸ್ಯೆಯನ್ನು ಬಗೆಹರಿಸಿ ಎಂದು ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಆದೇಶಮಾಡಿ 14 ತಿಂಗಳು ಕಳೆದರೂ ಸಮಸ್ಯೆ ಬಗೆಹರಿದಿಲ್ಲ. ಸ್ಥಳ ಪರಿಶೀಲಿಸದೆ ಗ್ರಾಮಗಳಲ್ಲಿರುವ ರೈತರು ಭೂಮಿ ಹಕ್ಕಪತ್ರ ಪಡೆದಿರುವ ಕಾನು, ಸೊಪ್ಪಿನಬೆಟ್ಟ, ಜಾಡಿ, ದನಗಳಿಗೆ ಮುಪತ್ತು, ಗೋಮಾಳ, ಹುಲ್ಲುಬನಿ ಎಂದಿರುವ ಪ್ರದೇಶಗಳನ್ನು ಸ್ಥಳೀಯ ಗ್ರಾಮ ಪಂಚಾಯ್ತಿಗಳು ಜನರ ಅಭಿಪ್ರಾಯ ಪಡೆಯದೇ ಅರಣ್ಯ ಎಂದು ಘೋಷಿಸಲಾಗಿದೆ. ಒಂದು ವೇಳೆ ಶರಾವತಿ ಮುಳುಗಡೆ ಸಂತ್ರಸ್ಥರನ್ನು ಒಕ್ಕಲೆಬ್ಬಿಸುವ ಕ್ರಮ ಮುಂದುವರಿದರೆ ದೆಹಲಿ, ಬೆಳಗಾಂ ಮಾದರಿ ಹೋರಾಟವನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸಾವಿರ ದಿನ ಪೂರೈಸಿದ್ದೇವೆ, ನುಡಿದಂತೆ ನಡೆದಿದ್ದೇವೆ ಎಂದು ಹೇಳುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಲೆನಾಡಿನ ರೈತರ ಸಮಸ್ಯೆ ಬಗೆಹರಿಸಲು ಒಂದು ಸಭೆ ನಡೆಸಲು ಒಂದು ದಿನವನ್ನು ನಿಗಧಿಮಾಡದೆ ರೈತರ ನಿರ್ಲಕ್ಷö್ಯ ಮಾಡುತ್ತಿದ್ದಾರೆ. ಕಂದಾಯ ಮಂತ್ರಿ ಕೃಷ್ಣ ಭೈರೇಗೌಡ ಅವರು ರಾಜ್ಯದಲ್ಲೇ ಶಿವಮೊಗ್ಗ ಹೆಚ್ಚು ಭೂಮಿ ಸಮಸ್ಯೆಯನ್ನು ಹೊಂದಿದೆ. ಕಂದಾಯ ಇಲಾಖೆ ಕೊಟ್ಟ ಭೂಮಿಯನ್ನು ಅರಣ್ಯ ಇಲಾಖೆ ನಮ್ಮದು ಎಂದು ಹೇಳುತ್ತಿದೆ ಎಂದು ಮಾಧ್ಯಮದವರ ಎದುರು ಹೇಳುತ್ತಾರೆಯೇ ವಿನಃ, ಸಂತ್ರಸ್ಥರ ಒಂದು ಸಭೆಯನ್ನೂ ಕರೆದಿಲ್ಲ. ಅರಣ್ಯ ಮಂತ್ರಿ ಈಶ್ವರ್ಖಂಡ್ರೆ ಅವರು ಶಿವಮೊಗ್ಗಕ್ಕೆ ಪಿಕ್ನಿಕ್ಗೆ ಬಂದAತೆ ಬಂದು ಹೋಗುತ್ತಾರೆ. ಹೆದ್ದಾರಿ ಬದಿಯಲ್ಲಿರುವ ಕೆಲವು ಬಲಾಢ್ಯರ ಹಿತಾಸಕ್ತಿ ರಕ್ಷಿಸಲು ಸಂರಕ್ಷಿತ ಅಭಯಾರಣ್ಯವನ್ನು ಬೇರೆ ಕಡೆ ಸ್ಥಳಾಂತರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಸರ್ಕಾರದ ವಿರುದ್ಧ ಹರಿಹಾಯ್ದರು. ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಸಿದ್ಧರಾಮಯ್ಯ, ಡಿ.ಕೆ. ಶಿವಕುಮಾರ್ ಶಿವಮೊಗ್ಗದಲ್ಲಿ ಸಾರ್ವಜನಿಕ ಸಭೆಗೆ ಆಗಮಿಸಿದ್ದಾಗ ಸಂತ್ರಸ್ಥರ ಪರವಾಗಿ ಮನವಿಯನ್ನು ನೀಡಲಾಗಿತ್ತು. ಚುನಾವಣೆ ಮುಗಿದ ಬಳಿಕ ತಾವು ಅಧಿಕಾರಕ್ಕೆ ಬಂದರೆ ಸಂತ್ರಸ್ಥರ ಸಮಸ್ಯೆಯನ್ನು ಬಗೆಹರಿಸುವುದಾಗಿ ಆಶ್ವಾಸನೆ ನೀಡಿದ್ದರು. ಆದರೆ ಅದು ಇನ್ನೂ ಈಡೇರಲಿಲ್ಲ. ಉಸ್ತುವಾರಿ ಸಚಿವ ಮಧುಬಂಗಾರಪ್ಪ ಅವರು ಮುಖ್ಯಮಂತ್ರಿಗಳಿಗೂ ರೈತರ ಸಮಸ್ಯೆ ಕುರಿತು ಸಮಸ್ಯೆ ಬಗೆಹರಿಸಲು ಒಂದು ವರ್ಷದ ಹಿಂದೆ ಪತ್ರಬರೆದರೂ ಮುಖ್ಯಮಂತ್ರಿಗಳ ಸಭೆ ನಿಗಧಿ ಮಾಡಿಲ್ಲ. ಸಚಿವ ಮಧುಬಂಗಾರಪ್ಪ ತಮ್ಮ ತಂದೆ ಬಂಗಾರಪ್ಪನವರು ರೈತರಿಗೆ ಭೂಮಿಕೊಟ್ಟಂತೆ ಮುಂದೆ ಬಂದು ರೈತರ, ಸಂತ್ರಸ್ಥರ ಹಿತ ಕಾಪಾಡಬೇಕು ಎಂದು ಸಲಹೆ ನೀಡಿದರು.

